Wednesday, 8 June 2016

ಕನ್ನಡದ ಆಯಸ್ಸು ಕನ್ನಡಿಗರ ಕೈಯಲ್ಲಿ

** ಕನ್ನಡದ ಆಯಸ್ಸು ಕನ್ನಡಿಗರ ಕೈಯಲ್ಲಿ **

ಇಂದು ಯಾವೊಬ್ಬ ರಾಜಕಾರಣಿಯೂ ಯಾವ ಸರ್ಕಾರವು ಕನ್ನಡವನ್ನು ಬೆಳೆಸುವುದಿರಲಿ ಉಳಿಸುವ ಪ್ರಯತ್ನವನ್ನು ಮಾಡುತ್ತಿಲ್ಲ. 1 2 3 ಎಲ್ಲವನ್ನೂ ಬಿಟ್ಟು ಕುಳಿತಿರುವ ಸರ್ಕಾರದಿಂದ ಏನೇನು ಮಾಡಲಾಗದು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ನಮ್ಮ ಭಾಷೆಯನ್ನು ಉಳಿಸಿ ಬೆಳೆಸುವ ಕೆಲಸಗಳನ್ನು ಇಂದು ನಾವೇ ಮಾಡಬೇಕಿದೆ. ಅದೆಷ್ಟೋ ಕನ್ನಡ ಪರ ಸಂಘಟನೆಗಳು, ಕನ್ನಡ ಪರ ದನಿ ಎತ್ತುವ ಜನರು, ಫೇಸ್ ಬುಕ್ ಟ್ವಿಟರ್ ನಂತಹ ಸಾಮಾಜಿಕ ತಾಣಗಳಲ್ಲಿ ಕನ್ನಡದ ಉಳಿವಿಗೆ ಪಣತೊಟ್ಟು ನಿಂತಿರುವ ಹಲವಾರು ಮಂದಿಯಿಂದಷ್ಟೆ ಇಂದು ನಮ್ಮ ಭಾಷೆಯನ್ನು ಉಳಿಸಲು ಸಾಧ್ಯ. ಕಪಟ ನಾಟಕವಾಡುವ ರಾಜಕಾರಣಿಗಳನ್ನೇ ಆಗಲಿ, ಕನ್ನಡದ ಅಭಿವೃದ್ಧಿಗಾಗಿ ಸರ್ಕಾರದಿಂದ ರಚನೆಯಾಗಿರುವ ಯಾವುದೇ ಸಂಸ್ಥೆಯನ್ನಾಗಲಿ ನಂಬುವುದು ಸಾಧ್ಯವೇ ಇಲ್ಲ.

ಕನ್ನಡದ ಒಬ್ಬ ಸಿನೆಮಾ ನಟ ಬರ ಪೀಡಿತ ಹಳ್ಳಿಗಳಿಗೆ ಕುಡಿಯುವ ನೀರನ್ನು ಒದಗಿಸಿದರೆ ಅದು ನಮ್ಮ ಜನಕ್ಕೆ ಶೋ ಆಫ್, ಬಕೆಟ್, ಪಬ್ಲಿಸಿಟಿ ಎಂದೆನಿಸುತ್ತದೆ. ಇಂದು ಅದೆಷ್ಟೊ ರಾಷ್ಟ್ರೀಯ ಕನ್ನಡಿಗರು ಹಿಂದಿಯ ದಾಸರಾಗಿ, ಹಿಂದಿ ಜನರ ಗುಲಾಮರಾಗಿ ಬಕೆಟ್ ಹಿಡಿಯುತ್ತಾ ಜೀವನ ಸಾಗಿಸುತ್ತಿದ್ದಾರಲ್ಲ ಇದು ಯಾರ ಗಮನಕ್ಕೂ ಬರಲಿಲ್ಲವೇ?. ಮಾತು ಎತ್ತಿದರೆ ವಿ ಆರ್ ಇಂಡಿಯನ್ಸ್ ಎಂದು ಪಾಠ ಹೇಳುವ ಇಂತಹ ಜನರು ಕನ್ನಡಕ್ಕೆ  ವಲಸಿಗರಿಗಿಂತಲೂ ಅತ್ಯಂತ ಅಪಾಯಕಾರಿ. ತಾಯ್ನಾಡಿಗೆ ನಿಷ್ಪ್ರಯೋಜಕರಾಗಿ ಬದುಕುತ್ತಿರುವ ಇವರು ರಾಷ್ಟ್ರಕ್ಕಾಗಿ ಎನನ್ನಾದರು ಒಳ್ಳೆಯ ಕೆಲಸ ಮಾಡುತ್ತಾರೆ ಎಂದು ಹೇಳಲಾಗುತ್ತದೆಯೇ?. ಇಂತಹ ಜನರ ಬದುಕಲ್ಲಿ ನಿಜವಾಗಿಯೂ ಸಾರ್ಥಕತೆ ಇದೆ ಎಂದು ನನಗೆ ಅನ್ನಿಸುವುದಿಲ್ಲ.

ಇಲ್ಲಿ ನಾನು ಮಾತನಾಡುತ್ತಿರುವುದು ಕನ್ನಡದ ಬಗ್ಗೆ ಕೀಳಾಗಿ ಮಾತನಾಡುವ ವಲಸಿಗರ ಬಗ್ಗೆ, ನಮ್ಮ ನಾಡಲ್ಲೇ ಹುಟ್ಟಿ ಇಲ್ಲೇ ಬೆಳೆದು ಕನ್ನಡವನ್ನು ತುಳಿಯತ್ತ ಹಿಂದಿಯ ಅಥವಾ ಪರ ಭಾಷ ಗುಲಾಮರಾಗಿರುವವರ ಬಗ್ಗೆ. 'ಹೊಲಸಿಗರು' ಕನ್ನಡ ಮತ್ತು ಕನ್ನಡಿಗರ ಬಗ್ಗೆ ಇಷ್ಟೆಲ್ಲಾ ಕೀಳಾಗಿ ಮಾತನಾಡುತ್ತಿದ್ದರು ಅನ್ನ ತಿನ್ನುವ ಯಾವೊಬ್ಬ ರಾಜಕಾರಣಿಯೂ  ಇದರ ಬಗ್ಗೆ ಮಾತನಾಡುತ್ತಿಲ್ಲ.

"ವಲಸಿಗರೆ ಮತ್ತು ರಾಷ್ಟ್ರೀಯ ಕನ್ನಡಿಗರೆ, ನೀವು ಕನ್ನಡ ಮಾತನಾಡದ್ದಿದ್ದರು ಪರವಾಗಿಲ್ಲ ನಮ್ಮ ಭಾಷೆಯನ್ನು ಮಾತ್ರ ಕೀಳಾಗಿ ಕಾಣಬೇಡಿ" ಎಂದು ನಾವು ಕೇಳಿಕೊಳ್ಳುವ ಮಟ್ಟಕ್ಕೆ ಸರ್ಕಾರ ನಮ್ಮನ್ನ ನೂಕುತ್ತಿದೆ. ಸರ್ಕಾರಕ್ಕೆ ಕಿಂಚಿತ್ತಾದರು ಮನಸ್ಸಿದ್ದರೆ ವಲಸಿಗರ ಈ ವರ್ತನೆಯನ್ನು ಹದ್ದುಬಸ್ತಿನಲ್ಲಿ ಇಡುವತ್ತ ಗಮನ ಹರಿಸಬೇಕು.

ಈ ಕೇಂದ್ರ ಸರ್ಕಾರ ಎಷ್ಟು ಸಾಧ್ಯವೋ ಅಷ್ಟು, ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಹಿಂದಿ ಹೇರಿಕೆ ಮಾಡುವುದರ ಮೂಲಕ ಕನ್ನಡಿಗರನ್ನ ದ್ವಿತಿಯ ದರ್ಜೆ ಪ್ರಜೆಗಳನ್ನಾಗಿ ಮಾಡುತ್ತಿದೆ. ಇತ್ತೀಚೆಗೆ ರಾಜ್ಯ ಸರ್ಕಾರವು ಸಹ ಇದೆ ಹಾದಿಯನ್ನು ಅನುಸರಿಸುತ್ತಿರುವು ವಿಷಾದದ ಸಂಗತಿ.
ಪ್ರತಿಭಟನೆ, ಚಳುವಳಿಗಳ ಮೂಲಕ ಇಂದು ನಾವು ನಮ್ಮ ಭಾಷೆಯನ್ನು ಉಳಿಸಿಕೊಳ್ಳುವ ಪರಿಸ್ಥಿತಿ ಒದಗಿದೆ.

"ಕನ್ನಡದ ಬಗ್ಗೆಯ ನಮ್ಮ ಅಭಿಮಾನಕ್ಕೆ ಎರಡು ಮುಖ ಇದೆ. ಒಂದು ಭಾವನಾತ್ಮಕವಾದುದು. ಕನ್ನಡವನ್ನು ನಾವು ಕನ್ನಡ ತಾಯಿ, ಕನ್ನಡಮ್ಮ, ಭುವನೇಶ್ವರಿ ಎಂದೆನ್ನುತ್ತೇವೆ. ಭಾಷೆಯನ್ನು ನಮ್ಮ ಭಾವಸ್ಪಂದನಕ್ಕೆ, ಹಾಡಿಕೊಂಡು ಕುಣಿಯಲಿಕ್ಕೆ ಉಪಯೋಗಿಸುತ್ತೇವೆ. ಇನ್ನೊಂದು ನಮ್ಮ ಭಾಷೆಯಲ್ಲಿ ನಾವು ಆಲೋಚಿಸಲು, ತಿಳಿಸಲು, ವ್ಯವಹರಿಸಲು, ಜ್ಞಾನವನ್ನು ಶೇಖರಿಸಿ ಮುಂಬರುವ ಅನೇಕ ತಲೆಮಾರುಗಳಿಗೆ ಹಸ್ತಾಂತರಿಸಲು ಉಪಯೋಗಿಸುತ್ತೇವೆ. ಒಂದು ಬಗೆಯ ಉಪಯೋಗವನ್ನು ಭಾವೋಪಯೋಗವೆಂದು, ಇನ್ನೊಂದು ಬಗೆಯ ಉಪಯೋಗವನ್ನು ಲೋಕೋಪಯೋಗವೆಂದು ಕರೆಯುತ್ತೇವೆ. ಭಾಷೆಯ ಈ ಎರಡು ಬಗೆಯ ಉಪಯೋಗಗಳ ಸ್ಪಷ್ಟ ಅರಿವು ಇರದವನು ಭಾಷೆಯ ಬಗ್ಗೆ ಅಂಧಾಭಿಮಾನಿಯಾಗುತ್ತಾನೆ. ಒಂದು ಭಾಷೆಯ ಉಳಿವು ಅಳಿವುಗಳು ಇಂದು ನಿರ್ಧಾರವಾಗುವುದು ಅದು ಎಷ್ಟು ಲೋಕೋಪಯೋಗಿಯಾಗಿ ತನ್ನ ಕಾರ್ಯ ನಿರ್ವಹಿಸಲು ಸಮರ್ಥವಾಗಿದೆ ಎನ್ನುವುದರ ಮೇಲೆ."
(ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಹೊಸ ವಿಚಾರಗಳು ಪುಸ್ತಕದಿಂದ)

ಪೂಚಂತೆಯವರ ಮಾತುಗಳಲ್ಲಿ ತುಂಬಾನೇ ಅರ್ಥವಿದೆ. ಆ ವೆಬ್ ಸೈಟಿನಲ್ಲಿ ಕನ್ನಡ ಇಲ್ಲ, ಈ ವೆಬ್ ಸೈಟಿನಲ್ಲಿ ಬರೇ ಇಂಗ್ಲಿಷ್ ಹಿಂದಿಯನ್ನೇ ತುಂಬಿದ್ದಾರೆ ಎಂದು ಬೊಬ್ಬೆ ಹೊಡೆಯುವ ನಾವು ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಲಭ್ಯವಿರುವಾಗ ಅದೆಷ್ಟು ಜನರು ಫೇಸ್ ಬುಕ್ ಮತ್ತು ವಾಟ್ಸ್ ಆಪ್ ಅನ್ನು ಕನ್ನಡದಲ್ಲಿ ಬಳಸುತ್ತಿದ್ದೀವಿ? ಒಂದು ಭಾಷೆ  ಲೋಕೋಪಯೋಗಿಯಾಗಿ ಬಳಕೆಯಾಗದೆ ಹೊರತು ಎಂದಿಗೂ ಬೆಳೆಯಲಾರದು. ಇನ್ನಾದರೂ ನಾವು ಕನ್ನಡವನ್ನು ಹೆಚ್ಚು ಲೋಕೋಪಯೋಗಿ ಮಾಡುವತ್ತ ಸಾಗಬೇಕಿದೆ.

No comments:

Post a Comment