Sunday, 18 September 2016

ನಾನು ಕಂಡಂತೆ ತಿಥಿ

ಈರೆಗೌಡ್ರು ಅವರು ಹುಟ್ಟಿ ಬೆಳೆದ ಹಳ್ಳಿಯ ಶುದ್ಧ ಜೀವನದ ಪ್ರಸಂಗಗಳನ್ನ ಕಥೆಯನ್ನಾಗಿಸಿದರೆ, ರಾಮ್ ರೆಡ್ಡಿಯವರು ಈ ಕಥೆಯನ್ನು ತೆರೆಯೆ ಮೇಲೆ ತಂದು ಪ್ರೇಕ್ಷಕ ಸಿನೆಮಾದಲ್ಲೇ ಮೈ ಮರೆಯುವಾಗೆ ಮಾಡಿದ್ದಾರೆ.

ಚಿತ್ರಕ್ಕೆ ಅನುಭವಿ ಕಲಾವಿದರನ್ನು ಬಿಟ್ಟು ಹಳ್ಳೆಯಲ್ಲೇ ವಾಸಿಸುವವರನ್ನು ಆಯ್ಕೆ ಮಾಡಿಕೊಂಡು ಅವರಿಂದ ಜನರು ಮೆಚ್ಚುವ ಹಾಗೆ ನಟನೆ ಮಾಡಿಸಿರುವುದು ಚಿತ್ರ ತಂಡದ ಒಳ್ಳೆಯ ಪ್ರಯತ್ನ. ಚಿತ್ರದ ಸಂಭಾಷಣೆಯಲ್ಲಿ ಒಂದೊಳ್ಳೆ ಗಟ್ಟಿತನವಿದೆ, ಪ್ರತೀ ಪಾತ್ರವು ನೂರಕ್ಕೆ ನೂರರಷ್ಟು ನೈಜತೆಯಿಂದ ಕೂಡಿದೆ.

ಹಳ್ಳಿಯಲ್ಲಿ ಹುಟ್ಟಿ ಬೆಳೆದ ನನ್ನಂತವರಿಗೆ ಸೆಂಚುರಿಗೌಡ, ಗಡ್ಡಪ್ಪ, ತಮ್ಮಣ್ಣ, ಅಭಿ ಎಲ್ಲರೂ ನಮ್ಮ ಜೀವನದಲ್ಲಿ ಎಲ್ಲೋ ಒಂದು ಕಡೆ ಬಂದು ಹೋದ ಜನರಂತೆ ಕಾಣುತ್ತಾರೆ. ತಿಥಿ ನೋಡುತ್ತಿದ್ದರೆ ನನಗೆ ಒಂದು ಒಳ್ಳೆ ಕಾದಂಬರಿ ಓದಿದ ಹಾಗೆ ಅನ್ನಿಸುತ್ತದೆ. ಎಲ್ಲಾ ಕಾದಂಬರಿಗಳಲ್ಲೂ ಒಂದು ವಿಶೇಷ ಪಾತ್ರವಿರುವಂತೆ ತಿಥಿಯಲ್ಲಿ ನನಗೆ ಗಡ್ಡಪ್ಪನ ಪಾತ್ರ ತುಂಬಾನೆ ವಿಶಿಷ್ಟವಾಗಿ ಕಾಣುತ್ತದೆ.

ಇಲ್ಲಿ ಆರ್ಟ್ ಅಥವಾ ಕಮರ್ಷಿಯಲ್ ಸಿನೆಮಾವೆಂದು ವರ್ಗಿಕರಿಸುವ ಅವಶ್ಯಕತೆವಿಲ್ಲವೆಂದು ನನಗೆ ಅನ್ನಿಸುತ್ತದೆ. ತಿಥಿ ಒಂದು ಒಳ್ಳೆಯ ಸಿನೆಮಾ. ಕನ್ನಡದಲ್ಲಿ ಏನು ಇಲ್ಲ, ಕನ್ನಡ ಸಿನೆಮಾಗಳೆಲ್ಲಾ ಬರೇ ಬೋರಿಂಗ್ ಎಂದು ಬೊಬ್ಬೆ ಹೊಡೆಯುವ ಜನರು ಒಂದು ಬಾರಿಯಾದರು ತಿಥಿಗೆ ಹೋಗಿ ಬರಬೇಕು.

ಅಂತರಾಷ್ಟೀಯ ಪ್ರಶಸ್ತಿ ಬಂದಿದೆ ಎಂಬ ಕಾರಣಕ್ಕೆ ತಿಥಿ ನೋಡುವುದಕ್ಕಿಂತ, ನಮ್ಮ ಕನ್ನಡ ಸಿನೆಮಾ, ವಿಭಿನ್ನ ರೀತಿಯ ಮತ್ತು ನೈಜ ಮನರಂಜನಾ ಪರಿಪೂರ್ಣ ಸಿನೆಮಾ ಎಂದು ನೋಡಿದರೆ  ಮಜ ಜಾಸ್ತಿ. ಇಷ್ಟೆಲ್ಲಾ ಇರುವುದಕ್ಕೆ ಅಲ್ಲವೋ ಅಷ್ಟೆಲ್ಲಾ ಪ್ರಶಸ್ತಿಗಳ ಸರಮಾಲೆ?

ಈರೆಗೌಡ್ರು, ರಾಮ್ ರೆಡ್ಡಿ ಮತ್ತು ಚಿತ್ರತಂಡಕ್ಕೆ ಶುಭವಾಗಲಿ. ಮುಂದೆ ಈ ತಂಡದಿಂದ ಕನ್ನಡಕ್ಕೆ ಇನ್ನೂ ಹೆಚ್ಚು ಒಳ್ಳೆ ಸಿನೆಮಾಗಳು ಸಿಗುವಂತಾಗಲಿ.

"ಇದುವರೆಗೂ ನಾನು ಹೇಳಿದ್ದು ಒಂದು ಕಥೆಯೋ ಅಥವಾ ನೆನ್ನೆ ಕಂಡ ಕನಸೋ ನನಗಂತು ಗೊತ್ತಿಲ್ಲ".
(ತಿಥಿ ನೋಡಿದವರಿಗೆ ಈ ಮಾತಿನ ಅರ್ಥ ತಿಳಿಯುತ್ತದೆ).

ಕುಡಿಯುವ ನೀರು ನಮ್ಮೆಲ್ಲರ ಹಕ್ಕು - ಕಳಸಾ ಬಂಡೂರಿ ಹೋರಾಟವನ್ನು ಬೆಂಬಲಿಸಿ

ಒಂದು ವರ್ಷದಿಂದ ಜನರು ಕುಡಿಯುವ ನೀರಿಗಾಗಿ ಹೋರಾಟ ಮಾಡುತ್ತಿದ್ದಾರೆ ಎಂದರೆ ಅದು ನಿಜವಾಗಿಯೂ ನಾಗರಿಕ ಸಮಾಜ ತಲೆ ತಗ್ಗಿಸುವಂತದ್ದು. ಜನರ ಬದುಕಲು ಅತ್ಯಗತ್ಯವಾದ ಕುಡಿಯುವ ನೀರನ್ನು ಒದಗಿಸಲು ಸರ್ಕಾರದಿಂದ ಸಾಧ್ಯವಿಲ್ಲದಿದ್ದರೆ ಅಂತಹ ಸರ್ಕಾರಗಳಾದರೂ ನಮಗೇತಕ್ಕೆ? ಕಳಸಾ ಬಂಡೂರಿ ಬೆಂಬಲಿಸದ ಪ್ರತಿಯೊಬ್ಬ ರಾಜಕಾರಣಿಯೂ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು.

ಜನರು ಸಾಯುತ್ತಿದ್ದರೂ ನೋಡತ್ತ ಸುಮ್ಮನೆ ಕೂರಲು ಹೇಗಾದರೂ ಈ ರಾಜಕಾರಣಿಗಳಿಗೆ ಮನಸ್ಸಾಗುತ್ತದೆಯೋ. ತೆರಿಗೆ ಹಣವನ್ನು ಮನಬಂದಂತೆ ಪೋಲು ಮಾಡುವುದು ಬಿಟ್ಟರೆ ಇವರಿಗೆ ಬೇರೇನು ತಿಳಿದಿರುವಂತೆ ಕಾಣುವುದಿಲ್ಲ. ಹೇಗಾದರೂ ಹಣ ತಿಂದು ಸಾಯಲಿ ಕೊನೆಯ ಪಕ್ಷ ಜನರ ಕೂಗಿಗೆ ಸ್ಪಂದಿಸುತ್ತಾರೆಯೇ ಎಂದರೆ ಅದೂ ಇಲ್ಲ. ಇಂತಹ ದಂಡಪಿಂಡಗಳನ್ನು ಯಾವ ಭಾಷೆಯಲ್ಲಿ ಉಗಿಯಬೇಕು ಎಂಬುದೇ ತಿಳಿಯತ್ತಿಲ್ಲ.

ಕುಡಿಯುವ ನೀರು ಭೂಮಿಯ ಮೇಲೆ ಬದುಕಿರುವ ಪ್ರತೀ ಜೀವಿಗೂ ಅವಶ್ಯಕವಾಗಿ ಬೇಕಿರುವ ವಸ್ತು. ಮೂಕ ಪ್ರಾಣಿಗಳಿಗೆ ನೀರು ಸಿಗದ್ದಿದ್ದರೆ ಅವು ಸಾಯುತ್ತವೆ, ಆದರೆ ಮನುಷ್ಯನ ವಿಚಾರದಲ್ಲಿ ಹಾಗಲ್ಲ ಮನುಷ್ಯ ತನಗೆ ಬೇಕಿರುವುದನ್ನು ಕೇಳಿ ಪಡೆದುಕೊಳ್ಳುವ ಅವಕಾಶಗಳನ್ನು ಹೊಂದಿದ್ದಾನೆ ಮತ್ತು ಇದು ಆತನ ಹಕ್ಕು. ಆದರೆ ಇಂದು ಆಗುತ್ತಿರುವುದಾದರೂ ಏನು, ವರ್ಷಾನುಗಟ್ಟಲೆ ಹೋರಾಟ ಮಾಡಿದರೂ ಏನು ಕ್ರಮ ಕೈಗೊಳ್ಳದ ಈ ಸರ್ಕಾರ ಸುಮ್ಮನೆ ಕೇಳಿದರೆ ಕೊಡುತ್ತಾರೆಯೇ?. ಇಂತಹ ಎಮ್ಮೆ ಚರ್ಮದ ರಾಜಕಾರಣಿಗಳಿಗೆ ಮನವರಿಕೆ ಮಾಡಿಕೊಡಲು ಇಂದು ಜನರು ಹೋರಾಟ ಮಾಡಬೇಕಾಗಿದೆ ಕೆಲವು ಬಾರಿಯಂತು ಪ್ರಾಣವನ್ನೇ ಕೊಟ್ಟು ನಮಗೆ ಅಗತ್ಯವಾದದನ್ನು ಪಡೆದುಕೊಳ್ಳಬೇಕು. ಪರಿಸ್ಥಿತಿ ಹೀಗಿರುವಾಗ ಕಳಸ ಬಂಡೂರಿ ಹೋರಾಟ ಮಾತ್ರ  ಸರ್ಕಾರ ಮತ್ತು ರಾಜಕಾರಣಿಗಳ ಪಾಲಿಗೆ ಸೊಳ್ಳೆಯ ಕೂಗಿನಂತಾಗಿದೆ. ಜನರ ಕಷ್ಟಗಳಿಗೆ ಸ್ಪಂದಿಸದ ಇಂತಹ ರಾಜಕಾರಣಿಗಳು ನಿಮ್ಮ ಮನೆ ಬಾಗಲಿಗೆ ಓಟು ಕೇಳಲು ಬಂದಾಗ ಸಗಣಿಯಿಂದ ಅವರ ಮುಖಕ್ಕೆ ಬಾರಿಸಬೇಕು. ಗೂಟ ಕಿತ್ತುಕೊಂಡು ಒಡೆದರೂ ತಪ್ಪಲ್ಲ.

ಕಳಸಾ ಬಂಡೂರಿ ವಿಚಾರವಾಗಿ ದನಿ ಎತ್ತದ ಕರ್ನಾಟಕದ ೨೮ ಎಂ.ಪಿಗಳು ಎಲ್ಲಿದ್ದಾರೆ ಎಂದು ಯಾರಾದರೂ ಕೇಳಿದರೆ "ಜನರ ದುಡ್ಡಲ್ಲಿ ಮಜಾ ಮಾಡ್ತಾವ್ರೆ" ಎಂದು ಎಲ್ಲರೂ ಸರಾಗವಾಗಿ ಉತ್ತರಿಸುತ್ತಾರೆ. ಕೆಲವು ಎಂ.ಪಿಗಳು ಪ್ರಧಾನಿಯವರೊಡನೇ ಇದರ ಬಗ್ಗೆ ಚರ್ಚೆ ನಡೆಸಿದ್ದರು ಅದು ನೆಪಕ್ಕೋ, ಅವರ ಅಸ್ತಿತ್ವದ ವಿಚಾರಕ್ಕೋ ಇರಬಹುದು. ನಿಜವಾಗಿಯೂ ಕಳಸ ಬಂಡೂರಿ ಜನರ ಹಿತ ಕಾಯುವವರಾಗಿದ್ದರೇ ನಿರಂತರವಾಗಿ ಪ್ರಧಾನಿಯವರ ಮೇಲೆ ಒತ್ತಡ ತರಬೇಕಿತ್ತು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ೨೮ ಜನ ಎಂಪಿಗಳಲ್ಲಿ ೧೭ ಜನರು ಬಿಜೆಪಿ ಸಂಸದರು ಉಳಿದ ಹಾಗೆ ೯ ಕಾಂಗ್ರೆಸ್ ಹಾಗೂ ೨ ಜೆಡಿಎಸ್. ಬಹುಪಾಲು ಬಿಜೆಪಿಯವರೇ ಇದ್ದಾರೆ, ಕೇಂದ್ರದಲ್ಲಿ ಅವರದ್ದೇ ಸರ್ಕಾರವಿರುವಾಗ ತಮ್ಮದೇ ಸರ್ಕಾರದ ವಿರುದ್ಧ ಬಂಡಾಯವೇಳಲು ಇವರಿಗೆ ಸಾಧ್ಯವೇ? ಬಂಡಾಯವೆದ್ದರೆ ಇವರ ಕುರ್ಚುಗಳ ಗತಿಯೇನು? ಕೇಂದ್ರದಲ್ಲಿ ಸಚಿವರಾಗಿರುವ ರಾಜ್ಯದ ಸಂಸದರ ಪಾಡು ಏನಾಗಬೇಕು?. ಇನ್ನೂ ಕಾಂಗ್ರೇಸಿನವರನ್ನು ಕೇಳಿದರೆ ಕೇಂದ್ರದಲ್ಲಿ ಬಿಜೆಪಿಯವರು ಅಧಿಕಾರದಲ್ಲಿರುವಾಗ ನಾವೇನು ಮಾಡಲು ಸಾಧ್ಯ? ಎಂದು ನಮಗೆ ಪ್ರಶ್ನೆ ಕೇಳುತ್ತಾರೆ. ಹಾಗಿದ್ದರೇ ಹಿಂದೆ ಅಧಿಕಾರದಲ್ಲಿ ಇದ್ದವರು ಇದೇ ಕಾಂಗಿಗಳಲ್ಲವೋ? ಅವಾಗ ಏನು ಕಿಸಿದಿದ್ದಾರೆ?. ಈ ಜೆಡಿಎಸ್ ಅಂತು ಅತ್ತಲಾಗೂ ಇಲ್ಲ ಇತ್ತಲಾಗೂ ಇಲ್ಲ ಎಂಬಂತೆ ಇದೆ.

ಅಂದು ಸ್ವತಂತ್ರಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಟ ಮಾಡಿಯಾಯಿತು. ಇಂದು ಕುಡಿಯುವ ನೀರಿಗಾಗಿ ಕೇಂದ್ರ ಸರ್ಕಾರದ ಜೊತೆ ಗುದ್ದಾಡಬೇಕಿದೆ. ಕರ್ನಾಟಕದ ಜನರ ಸಮಸ್ಯೆಯನ್ನು ದೆಹಲಿ ಮಟ್ಟದಲ್ಲಿ ಎತ್ತಿ ಹಿಡಿದು ತೋರಿಸುವ ರಾಜಕಾರಣಿಗಳ ಕೊರತೆ ಇಂದು ನಮ್ಮ ರಾಜ್ಯದಲ್ಲಿದೆ. ಕೆಲವು ಅಂಡೆ ಪಿರ್ಕಿಗಳು ತಮ್ಮ ರಾಜಕೀಯ ಲಾಭಕ್ಕಾಗಿ ಕಳಸ ಬಂಡೂರಿ ವಿವಾದವನ್ನು ಬಳಸಿಕೊಳ್ಳುತ್ತಿದ್ದಾರೆ. ಇಂದು ಮಹದಾಯಿ ನದಿ ನೀರು ನ್ಯಾಯಾಧೀಕರಣ  ಕರ್ನಾಟಕದ ಮಧ್ಯಂತರ ಅರ್ಜಿ ವಜಾ ಮಾಡಿರುವುದಕ್ಕೆ ಇಲ್ಲಿಯ ೨೮ ಸಂಸದರು, ರಾಜ್ಯ ಸರಕಾರ  ಹಾಗೂ ಕೇಂದ್ರ ಸರಕಾರಗಳೇ ನೇರ ಕಾರಣ.  ಯಾವ ಅನ್ನ ತಿನ್ನುವ ರಾಜಕಾರಣಿ ಇದುವರೆಗೂ ಕಳಸಾ ಬಂಡೂರಿ ಬೆಂಬಲಿಸಿದ್ದಾನೆ ಹೇಳಿ? ನಾಚಕೆ ಮಾನ ಮರ್ಯಾದೆ ಬಿಟ್ಟು ನಿಂತಿರುವ ಈ ದರಿದ್ರ ರಾಜಕಾರಣಿಗಳಿಕೆ ಬೇಕಿರುವುದು ಹಣ ಮತ್ತು ಅಧಿಕಾರವೇ ಹೊರತು ಜನರ ಕಷ್ಟ ಸುಖವಲ್ಲ.
ಕಳಸಾ ಬಂಡೂರಿ ವಿವಾದ ಬಗೆಹರಿಯವವರೆಗೂ ತಮಿಳು ನಾಡಿಗೆ ಕಾವೇರಿ ನೀರು ಬಿಡುವುದನ್ನು ನಿಲ್ಲಿಸಬೇಕು, ಗೋವ ಹೆದ್ದಾರಿಯನ್ನು ಸಂಪೂರ್ಣ ಬಂದ್ ಮಾಡಬೇಕು ಆಗಲಾದರೂ ಕೇಂದ್ರ ಸರ್ಕಾರ ಕಣ್ಣು ತರೆಯುತ್ತ ನೋಡೋಣ.

"ಜೈ ಜವಾನ್ ಜೈ ಕಿಸಾನ್" ಎಂದು ಹೇಳುವ ಸರ್ಕಾರ ರೈತನನ್ನು ಸಹ ಸೈನಿಕನಂತೆ ಗೌರವಿಸಬೇಕು. ಇಂದು ನಮ್ಮ ಕಳಸಾ ಬಂಡೂರಿ ಭಾಗದ ರೈತರು ಕೇಳುತ್ತಿರುವುದು ಕುಡಿಯುವ ನೀರಲ್ಲದೇ ಬೇರಾವ ಸವಲತ್ತುಗಳನ್ನು ಅಲ್ಲ. ಇದನ್ನೂ ಮಾಡದ ಸರ್ಕಾರ ಇದ್ದರೆಷ್ಟು ಹೋದರೆಷ್ಟು?. ಕಳಸಾ ಬಂಡೂರಿ ಯೋಜನೆಯಿಂದ ಪ್ರಯೋಜನ ಪಡೆಯುವ ಧಾರವಾಡ, ಬೆಳಗಾವಿ ಮತ್ತು ಗದಗ ಭಾಗದ ಸಂಸದರುಗಳೆಲ್ಲಾ ಬಿಜೆಪಿಯವರೇ ಇರುವಾಗ ಇವರು ನಿಜವಾಗಿಯೂ ಈ ಯೋಜನೆಯನ್ನು ಬೆಂಬಲಿಸುತ್ತಾರೆಯೇ?

ಇಂತಹ ರಾಜಕಾರಣಿಗಳಿಗೆ ಬಿಸಿ ಮುಟ್ಟಿಸಬೇಕಾದರೆ ಪ್ರತಿಯೊಬ್ಬ ಕನ್ನಡಿಗನೂ ಕಳಸಾ ಬಂಡೂರಿ ಯೋಜನೆಯನ್ನು ಪಕ್ಷಾತೀತವಾಗಿ ಬೆಂಬಲಿಸಬೇಕು.
#KalasaBanduri

Thursday, 15 September 2016

ಕರ್ವಾಲೋ ಕಾದಂಬರಿಯ ಪಾತ್ರಗಳು



1980 ರಲ್ಲಿ ಮೊದಲು ಮುದ್ರಣಗೊಂಡು ಇವತ್ತಿನವರೆಗೆ ಸುಮಾರು 36 ಮರುಮುದ್ರಣಗೊಂಡು  ಜನಪ್ರಿಯವಾಗಿರೋ ಕರ್ವಾಲೋ ಕಾದಂಬರಿ ಎಲ್ಲರಿಗೂ ಇಷ್ಟವಾಗಿರುವುದಕ್ಕೆ ಈ ಕಾದಂಬರಿಯಲ್ಲಿರುವ ಕೆಲವು ವಿಶೇಷ ಪಾತ್ರಗಳು ಕೂಡ ಕಾರಣವಾಗಿವೆ. 

ಕಾದಂಬರಿಯ ಪ್ರಾರಂಭದಲ್ಲಿ ನಮಗೆ ಮೊದಲು ಪರಿಚಯವಾಗುವ ಪಾತ್ರಗಳೆಂದರೆ ಮಂದಣ್ಣ ಮತ್ತು ಲಕ್ಷ್ಮಣ. ಹೊರ ನೋಟಕ್ಕೆ ಹಳ್ಳಿ ಗಮಾರನಂತೆ, ಹೆಡ್ಡನಂತೆ ಕಾಣುವ ಮಂದ ಬುದ್ಧಿಯ ಮಂದಣ್ಣ ಕರ್ವಾಲೋರ ದೃಷ್ಟಿಯಲ್ಲಿ ಅವನೊಬ್ಬ 'ಹೊಮೋಸೆಪಿಯನ್ ವರ್ಗದ ಅಪೂರ್ವ ಸ್ಪೆಸಿಮನ್'. ನಿರೂಪಕರಿಗೂ ಮೊದ ಮೊದಲು ಮಂಗಣ್ಣನಂತೆ ಕಂಡ ಈ ಮಂದಣ್ಣ ನಂತರ ವಿಶೇಷ ವ್ಯಕ್ತಿಯಾಗಿ ಚಿತ್ರಣಗೊಂಡಿರುವುದನ್ನು ನಾವು ಕಾಣಬಹುದು.
ಜೇನು, ಕಾಡು, ಹುಳ, ಹಾರುವ ಓತಿ ಹೀಗೆ ಹಲವು ಉಪಯುಕ್ತ ವಿಚಾರಗಳ ಜೊತೆಗೆ ಮೆರೇಜು, ಪಿಗ್ಮಟನ್ ಪ್ರಸಂಗದಂತಹ ಹಾಸ್ಯವನ್ನು ಮಂದಣ್ಣ ನಮಗೆ ಬಡಿಸುತ್ತಾನೆ. ಪ್ರಾರಂಭದಲ್ಲಿ ಸಾಮಾನ್ಯನಾಗಿ ಕಾಣುವ ಇವನು ಕಾದಂಬರಿಯ ಕೊನೆಯಲ್ಲಿ ಅಗೋಚರ ವಿಶ್ವದ ತುಣುಕಾಗಿ ನಮಗೆ ಕಾಣುತ್ತಾನೆ.
ಮಂದಣ್ಣನ ಆಪ್ತನಾದ ಲಕ್ಷ್ಮಣ ಮಂದಣ್ಣನ ಮದುವೆ ಹಾಗೂ ಮಂದಣ್ಣ ಜೈಲಿಗೆ ಹೋಗುವಾಗ ತೋರಿದ ಚಾಣಾಕ್ಷ ಬುದ್ಧಿ ಮತ್ತು ಸಮಯ ಪ್ರಜ್ಞೆಯಿಂದ ಕಾದಂಬರಿಯ ಮೊದಲಾರ್ಧದಲ್ಲಿ  ತನ್ನದೇ ಆದ ವಿಶೇಷ ಛಾಪು ಮೂಡಿಸಿದ್ದಾನೆ.  

"ಕಾಣ್ತದೆ, ಆದ್ರೆ ಕಾಣಕಿಲ್ಲ" ಎಂಬ ಮಾತು, ಮುಗ್ಧತೆ ಮತ್ತು ಚೇಷ್ಟೆಯೊಂದಿಗೆ ನಮ್ಮನ್ನು ಅಲ್ಲಲ್ಲಿ ನಗಿಸುವ ಪಾತ್ರವೆಂದರೆ ಪ್ಯಾರನದು. ಪಿಗ್ಮಟನ್ ಪುರಾಣದಲ್ಲಿ ಧರ್ಮದ ಬಗ್ಗೆ ಅವನು ಆಡುವ ಮಾತುಗಳನ್ನು ನಾವು ಗಮನಿಸಬೇಕು. "ತಿನ್ನೋದಕ್ಕೆ ಯಾವ ಧರ್ಮದ ಹಂಗೇಕೆ" ಅನ್ನೋದು ನಿಜ ಅನಿಸುತ್ತದೆ.
ಪ್ರಭಾಕರನ ಫೋಟೋಗ್ರಫಿ ಮತ್ತು ಬುದ್ಧಿವಂತಿಕೆ, ಇಟ್ಟಿಗೆ ಸುಡುವವನ ಅರ್ಥವಾಗದ ಮಾತು, ವೋಲ್ಟ್ ಸಾನ್ ವೆನ್ಸ್ ರ ವಕೀಲಿ ಬುದ್ಧಿ, ನಾಗರಾಜನ ದೃಷ್ಟಿಕೋನ ಇವೆಲ್ಲವೂ ಕಾದಂಬರಿಯಲ್ಲಿ ಒಂದೊಂದು ದಿಕ್ಕಿನತ್ತ ನಮ್ಮ ಯೋಚನೆಗಳನ್ನು ಎಳೆದುಕೊಂಡು ಹೋಗುತ್ತವೆ. ಕರ್ವಾಲೋರವರು ಮಂದಣ್ಣನ ಜೊತೆ ಸೇರಿ ಮಾಡುತ್ತಿದ್ದ ಸಂಶೋಧನೆ ನಾರ್ವೆ ರಾಮಯ್ಯನಿಗೆ ಅಷ್ಟೇನು ಮುಖ್ಯವಾಗಿ ಕಾಣದಿರುವುದು ಸಾಮಾನ್ಯರ ದೃಷ್ಟಿಯಲ್ಲಿ ವಿಜ್ಞಾನ ಎಂಬುದು ಹೇಗೆ ಕಾಣುತ್ತದೆ ಎಂಬುದಕ್ಕೆ ಉದಾಹರಣೆ.

ಬಿರಿಯಾನಿ ಮತ್ತು ರೊಮ್ಯಾನ್ಸ್ ನಿಂದಲೇ ಜನರಿಗೆ ಇಷ್ಟವಾಗುವ ಕರಿಯಪ್ಪನ ಪಾತ್ರ ಕೇವಲ ಅಡುಗೆಗೆ ಸೀಮಿತವಾಗದೆ ಕಂಡ ಕಂಡಲ್ಲಿ ಕೋವಿ ಹಿಡಿದು ಶಿಕಾರಿಗೆ ಇಳಿಯುವುದರಿಂದ ಹಿಡಿದು ಸರ ಸರನೆ ಮರ ಹತ್ತುವ ಸಾಹಸದವರೆಗೂ ಹಬ್ಬಿಕೊಂಡಿರುವುದನ್ನು ನೋಡಿದರೆ 'ಮನುಷ್ಯ ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಲು ಸಾಧ್ಯ' ಎನಿಸುತ್ತದೆ. ಹಾವು ಹಿಡಿಯುವ ಎಂಗ್ಟನ ಪಾತ್ರ ಕಾದಂಬರಿಯ ಕೊನೆಯಲ್ಲಿ ಬಂದರೂ ಹಾವುಗಳ ಬಗ್ಗೆ ಈತನಿಗೆ ಇರುವ ಜ್ಞಾನ, ಈತನ ಅಲೆಮಾರಿ ಜೀವನ, ಹಾರುವ ಓತಿ ಹುಡುಕುವ ಸಾಹಸದಲ್ಲಿ ತನಗೆ ತಿಳಿಯದಂತೆ ಸಿಲುಕಿಕೊಳ್ಳುವ ಪರಿಯಂತು ಒಂದು ರೀತಿ ವಿಶೇಷವಾಗಿದೆ.

ಮಂದಣ್ಣನಲ್ಲಿರುವ ಜ್ಞಾನವನ್ನು ಗುರುತಿಸಿ, ಕಾಡಿನ ಕೊಂಪೆಯನ್ನು 'ವಂಡೆರ್ ಫುಲ್ ಜಾಗ' ಎಂದು ಕರೆದು ತಮ್ಮ ಸಹಜ ಕುತುಹಲದಿಂದ ಹಾರುವ ಓತಿಯನ್ನು ಹುಡುಕಲು ಹೊರಡುವ ಕರ್ವಾಲೋರವರ ತಾಳ್ಮೆ, ಸರಳ ಜೀವನ, ಕುತುಹಲ, ಉತ್ಸಾಹ, ಪ್ರೋತ್ಸಾಹ ಎಲ್ಲವನ್ನೂ ಕಾದಂಬರಿಯ ಉದ್ದಕ್ಕೂ ನಾವು ಕಾಣಬಹುದು. "ಸಾಕ್ಷಾಧಾರಗಳು ಇಲ್ಲದ ಯಾವುದನ್ನು ನಾನು ನಂಬೋದಿಲ್ಲ" ಎಂಬ ಮಾತಿನ ಮೂಲಕ ಅನಗತ್ಯ ವಿಚಾರಗಳನ್ನು ಬಿಟ್ಟು ಉಪಯೋಗಕ್ಕೆ ಬರುವ ಕೆಲಸಗಳತ್ತ ನಾವು ಗಮನಹರಿಸ ಬೇಕು ಎಂಬುದನ್ನು ಕರ್ವಾಲೋ ಸ್ಪಷ್ಟವಾಗಿ ತಿಳಿಸಿದ್ದಾರೆ.
ಕಾಡು, ಪರಿಸರ, ಗದ್ದೆ ಎಲ್ಲದರ ಬಗ್ಗೆ ಬೇಸರ ಮೂಡಿ ಊರನ್ನೇ ಬಿಟ್ಟು ಹೋಗಲು ತಯಾರಾಗಿದ್ದು, ಮಂದಣ್ಣ ಮತ್ತು ಕರ್ವಾಲೋರವರ ಪರಿಚಯದ ನಂತರ ಅವರುಗಳಿಂದ ಪಡೆದ ಜ್ಞಾನದಿಂದಾಗಿ ತನ್ನಲಿದ್ದ ಕುತುಹಲ ಮತ್ತು ಸಾಹಸ ಗುಣವನ್ನು ಬಡಿದೆಬ್ಬಿಸುವ ಮೂಲಕ ಹೊಸ ಲೋಕವನ್ನು ಕಾಣುವ ನಿರೂಪಕರು ಕಾದಂಬರಿಯ ಪ್ರಾರಂಭದಿಂದ ಕೊನೆಯವರೆಗೂ ಪ್ರತೀ ಮನುಷ್ಯನಲ್ಲೂ ಒಂದಷ್ಟು ವಿಚಾರಗಳನ್ನು ತಿಳಿದುಕೊಂಡು ತಮ್ಮನ್ನು ತಾವು ಬದಲಾಯಿಸಿ ಕೊಳ್ಳುವುದನ್ನು ಕಾಣಬಹುದು. ಕುತುಹಲ ಮತ್ತು ಹೊಸತನ್ನು ತಿಳಿದುಕೊಳ್ಳುವ ಆಸಕ್ತಿಯಿರುವವರೆಗೂ ಪ್ರತೀ ದಿನ ನಮ್ಮ ಜೀವನ ಹೊಸದಾಗಿರುತ್ತದೆ ಎಂಬುದಕ್ಕೆ ಈ ಪಾತ್ರವೇ ಸಾಕ್ಷಿ. 

ಎಲ್ಲಾ ಮಾನವ ಪಾತ್ರಗಳನ್ನು ಮೀರಿದ ಕಿವಿಯೆಂಬ ನಾಯಿಯ ಪಾತ್ರವನ್ನು ಮರೆಯುವ ಹಾಗಿಲ್ಲ. ನಿರೂಪಕ ಮತ್ತು ಕಿವಿಯ ನಡುವಿನ ಸಂಬಂಧ ಎಲ್ಲಾ ಮಾನವ ನಿರ್ಮಿತ ಸಂಬಂಧಗಳಿಗೂ ಮೀರಿದ್ದು ಎಂಬುವುದು ನಿಜ. ಕಿವಿಯ ಬುದ್ಧಿ, ಶಿಕಾರಿ ಗುಣ, ನಿರೂಪಕನ ಜೊತೆಗಿನ ಒಡನಾಟ ಇವೆಲ್ಲವನ್ನೂ ನೋಡಿದರೆ 'ನಂಬಿಕೆಗೆ ಅನರ್ಹವಾಗಿರೋ ಹೊಮೋಸೆಪಿಯನ್ ಗಿಂತ ಈ ಕಿವಿಯೇ ಎಷ್ಟೋ ಮೇಲು' ಅನಿಸುತ್ತದೆ.
ಮೂರರ ಮುಂದೆ ಏಳು ಸೊನ್ನೆ ಹಾಕಿದಷ್ಟು ವರ್ಷಗಳ ಹಿಂದಿನಿಂದ ಬದುಕುತ್ತಿರುವ ಈ ಹಾರುವ ಓತಿಯನ್ನು ಹುಡುಕಲು ಕರ್ವಾಲೋ, ಮಂದಣ್ಣ, ನಿರೂಪಕ, ಬಿರಿಯಾನಿ ಕರಿಯಪ್ಪ, ಎಂಗ್ಟ, ಪ್ರಭಾಕರ ಎಲ್ಲರೂ ಸೇರಿ ಮಾಡುವ ಸಾಹಸ ನೋಡಿದರೆ ನಾವು ನಮ್ಮ ಇತಿಹಾಸದ ಬಗ್ಗೆ ತಿಳಿದುಕೊಳ್ಳುವುದು ಎಷ್ಟು ಮುಖ್ಯ ಎಂಬುದನ್ನು ಪರೋಕ್ಷವಾಗಿ ತಿಳಿಸಿದಂತೆ ನನಗೆ ಕಾಣುತ್ತದೆ.

"ನಾವು ಸಾಮಾನ್ಯವೆಂದು ತಿಳಿದಿರುವ ಯಾವುದೂ ಸಾಮಾನ್ಯವಲ್ಲ, ಅವಕ್ಕೆ ಅಸಾಮಾನ್ಯವಾದ ದೃಷ್ಟಿಕೋನವು ಇರುತ್ತದೆ. ನಾವು ಅದನ್ನ ಕಣ್ಣು ಬಿಟ್ಟು ನೋಡೋದನ್ನ ಕಲಿಯಬೇಕು" ಎಂಬುವುದನ್ನು ತೇಜಸ್ವಿಯವರು ಈ ಪಾತ್ರಗಳ ಮೂಲಕ ನಮಗೆ ತಿಳಿಸಿದ್ದಾರೆ. ಈ ಎಲ್ಲಾ ಪಾತ್ರಗಳನ್ನು ನೋಡುತ್ತಿದ್ದರೆ "ಇಲ್ಲಿ ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ. ಯಾವುದೂ ಯಕಶ್ಚಿತವಲ್ಲ" ಎಂಬ ಕುವೆಂಪುರವರ ಮಾತು ಎಷ್ಟು ಚೆನ್ನಾಗಿ ಅರ್ಥ ಪಡೆದುಕೊಂಡಿದೆ ಎಂಬುದನ್ನು ಗಮನಿಸಬಹುದು.