Wednesday, 8 June 2016

ಮೂಕಜ್ಜಿಯ ಕನಸುಗಳು

"ಈ ಕಾದಂಬರಿಗೆ ಕಥಾನಾಯಕನಿಲ್ಲ; ನಾಯಕಿಯಿಲ್ಲ. ಮೂಕಜ್ಜಿಯೂ ಇಲ್ಲಿ ಕಥಾನಾಯಕಿಯಲ್ಲ. ಸಾಂಪ್ರದಾಯಿಕತೆಯಿಂದ ಹೆರೆಗಟ್ಟಿದ ಮನಸ್ಸುಗಳನ್ನು ತುಸು ತುಸುವಾಗಿ ಕಾಯಿಸಿ, ಕರಗಿಸುವ ಕೆಲಸ ಅವಳದ್ದು. ಅಂತಹ ಅಜ್ಜಿಯೊಬ್ಬಳು ಇದ್ದಾಳೆಯೇ ಎಂಬ ಸಂಶಯ ಬಂದರೆ, ನಮ್ಮ ಸಂಸ್ಕೃತಿಯ ನಂಬಿಕೆಗಳ ಕುರಿತಾದ ಸಂಶಯ ಪಿಶಾಚಿಯ ರೂಪವೇ ಅವಳೆಂದು ತಿಳಿದರಾಯಿತು. ಆದರು ಅವಳು ನಮ್ಮಲ್ಲನೇಕರಲ್ಲಿ ಪಿಶಾಚಿಯಂತಲ್ಲ, ಪ್ರಾಮಾಣಿಕ ಸಂದೇಹಗಳ ರೂಪದಲ್ಲಿ ಬದುಕಿಕೊಂಡೇ ಇದ್ದಾಳೆ. ಅವಳ ಮೊಮ್ಮಗನಾದ ಸುಬ್ಬರಾಯನಂಥವರು ಹಲವರಿದ್ದಾರೆ" ಎಂಬ ಮುನ್ನುಡಿಯೊಡನೆ ಪ್ರಾರಂಭವಾಗುವ ಕೆ. ಶಿವರಾಮ ಕಾರಂತರ "ಮೂಕಜ್ಜಿಯ ಕನಸುಗಳು" ಕಾದಂಬರಿ ಕನ್ನಡ ಸಾಹಿತ್ಯ ಲೋಕದಲ್ಲೇ ಒಂದು ವಿಶಿಷ್ಟ ಕಾದಂಬರಿ. ಇದನ್ನು ಯಾವುದೇ ಸಾಹಿತ್ಯ ಪ್ರಕಾರಕ್ಕೂ ಸೇರಿಸಲಾಗದು. ಈ ಕಾದಂಬರಿಯನ್ನು ಓದಿದಾಗಲೇ ಇದಕ್ಕೆ ಜ್ಞಾನಪೀಠ ಪ್ರಶಸ್ತಿ ಲಭಿಸಿದರ ಮಹತ್ವ ನಮಗೆ ತಿಳಿಯುವುದು.

ಮೂಕಜ್ಜಿ ಭವಿಷ್ಯ, ವರ್ತಮಾನ ಹಾಗೂ ಭೂತಕಾಲಗಳಲ್ಲಿ ಸರಾಗವಾಗಿ ತಿರುಗಾಡಬಲ್ಲವಳು. ಇಂತಹ ಅದ್ಭುತ ಶಕ್ತಿಯಿಂದಲೇ ಇಲ್ಲಿ ಮೂಕಜ್ಜಿ ನಮಗೆ ವಿಶಿಷ್ಟವಾಗಿ ಕಾಣಿಸುತ್ತಾಳೆ. ಸುಬ್ಬರಾಯ ನಮ್ಮ ಸಂಪ್ರದಾಯ, ಸಂಸ್ಕೃತಿ, ದೇವರುಗಳ ಬಗ್ಗೆ ಎತ್ತುವ ಎಲ್ಲಾ ಪ್ರಶ್ನೆಗಳಿಗೂ ಮೂಕಜ್ಜಿ ತನ್ನದೇ ಆದ ರೀತಿಯಲ್ಲಿ ನೀಡುವ ವಿಶ್ಲೇಷಣೆಗಳಂತು ಅದ್ಭುತವೇ ಸರಿ.

ಕೆಲವು ದಶಕಗಳ ಹಿಂದೆ ಕಾರಂತರು ಬರೆದ ಈ ಕಾದಂಬರಿ ಈಗಿನ ಕಾಲಕ್ಕೂ ಒಪ್ಪುವಂತದ್ದು ಮತ್ತು ಎಲ್ಲಾ ಕಾಲಕ್ಕೂ ಒಪ್ಪುವಂತಹದ್ದೇ ಸರಿ. ಗಲ್ಲಿ ಗಲ್ಲಿಗೆ ದೇವಸ್ಥಾನಗಳನ್ನು ಮಾಡಿಕೊಂಡು, ಮನಸ್ಸಿಗೆ ಬಂದಂತೆ ಹೊಸ ಹೊಸ ದೇವರುಗಳನ್ನು ಸೃಷ್ಟಿ ಮಾಡುತ್ತಾ, ಧರ್ಮ ಮತ್ತು ದೇವರ ಹೆಸರಿನಲ್ಲಿ ನಮ್ಮನ್ನು ಲೂಟಿ ಮಾಡುವ ಜನರ ಮಧ್ಯೆ ನಾವು ಬದುಕುತ್ತಿರುವಾಗ, ದೇವರಿಗೆ ನಾವು ಕೊಟ್ಟಿರುವ ಮತ್ತು ಕೊಡುತ್ತಿರುವ ಸ್ಥಾನವನ್ನು ತಿಳಿದುಕೊಳ್ಳುವುದು ತುಂಬಾ ಅವಶ್ಯಕವೆಂದು ನನಗೆ ಕಾಣುತ್ತದೆ.

ಇಲ್ಲಿ ನನಗೆ ತುಂಬಾ ಇಷ್ಟವಾದದ್ದು ಕಾರಂತರ ಜೀವನದೃಷ್ಟಿ ಮತ್ತು ಕಲಾಸೃಷ್ಟಿ. ಮೂಕಜ್ಜಿಯಂತಹ ಒಂದು ಪಾತ್ರವನ್ನು ಸೃಷ್ಟಿಸಿರುವುದು, ಆ ಪಾತ್ರದ ಮೂಲಕ ಮಹತ್ತರ ವಿಷಯಗಳನ್ನು ಜಗತ್ತಿಗೆ ತಿಳಿಸಿರುವುದು ಒಂದು ಪ್ರಯೋಗವಲ್ಲವೇ?. ಜಗತ್ತಿಗೆ ಸಾವಿರ ಸಾವಿರ ದೇವರುಗಳು ಇರುವ ಬದಲು ಒಂದೇ ದೇವರು ಇದ್ದರೆ ಸಾಕು ಎಂಬ ಕಾರಂತರ ನಿಲುವು  ಅದೆಷ್ಟೋ ಅರ್ಥಪೂರ್ಣವಾದದ್ದು.

ನನ್ನ ಈ ಬರವಣಿಗೆಯನ್ನು ವಿಮರ್ಶೆಯೆಂದು ತಿಳಿಯುವ ಅಗತ್ಯವಿಲ್ಲ. ಇದು ನನ್ನ ವಯಕ್ತಿಕ ಅಭಿಪ್ರಾಯ ಮತ್ತು ಕಾದಂಬರಿಯ ಬಗ್ಗೆ ತಿಳಿಸುವ ಪ್ರಯತ್ನವಷ್ಟೆ.

No comments:

Post a Comment