Sunday, 18 September 2016

ನಾನು ಕಂಡಂತೆ ತಿಥಿ

ಈರೆಗೌಡ್ರು ಅವರು ಹುಟ್ಟಿ ಬೆಳೆದ ಹಳ್ಳಿಯ ಶುದ್ಧ ಜೀವನದ ಪ್ರಸಂಗಗಳನ್ನ ಕಥೆಯನ್ನಾಗಿಸಿದರೆ, ರಾಮ್ ರೆಡ್ಡಿಯವರು ಈ ಕಥೆಯನ್ನು ತೆರೆಯೆ ಮೇಲೆ ತಂದು ಪ್ರೇಕ್ಷಕ ಸಿನೆಮಾದಲ್ಲೇ ಮೈ ಮರೆಯುವಾಗೆ ಮಾಡಿದ್ದಾರೆ.

ಚಿತ್ರಕ್ಕೆ ಅನುಭವಿ ಕಲಾವಿದರನ್ನು ಬಿಟ್ಟು ಹಳ್ಳೆಯಲ್ಲೇ ವಾಸಿಸುವವರನ್ನು ಆಯ್ಕೆ ಮಾಡಿಕೊಂಡು ಅವರಿಂದ ಜನರು ಮೆಚ್ಚುವ ಹಾಗೆ ನಟನೆ ಮಾಡಿಸಿರುವುದು ಚಿತ್ರ ತಂಡದ ಒಳ್ಳೆಯ ಪ್ರಯತ್ನ. ಚಿತ್ರದ ಸಂಭಾಷಣೆಯಲ್ಲಿ ಒಂದೊಳ್ಳೆ ಗಟ್ಟಿತನವಿದೆ, ಪ್ರತೀ ಪಾತ್ರವು ನೂರಕ್ಕೆ ನೂರರಷ್ಟು ನೈಜತೆಯಿಂದ ಕೂಡಿದೆ.

ಹಳ್ಳಿಯಲ್ಲಿ ಹುಟ್ಟಿ ಬೆಳೆದ ನನ್ನಂತವರಿಗೆ ಸೆಂಚುರಿಗೌಡ, ಗಡ್ಡಪ್ಪ, ತಮ್ಮಣ್ಣ, ಅಭಿ ಎಲ್ಲರೂ ನಮ್ಮ ಜೀವನದಲ್ಲಿ ಎಲ್ಲೋ ಒಂದು ಕಡೆ ಬಂದು ಹೋದ ಜನರಂತೆ ಕಾಣುತ್ತಾರೆ. ತಿಥಿ ನೋಡುತ್ತಿದ್ದರೆ ನನಗೆ ಒಂದು ಒಳ್ಳೆ ಕಾದಂಬರಿ ಓದಿದ ಹಾಗೆ ಅನ್ನಿಸುತ್ತದೆ. ಎಲ್ಲಾ ಕಾದಂಬರಿಗಳಲ್ಲೂ ಒಂದು ವಿಶೇಷ ಪಾತ್ರವಿರುವಂತೆ ತಿಥಿಯಲ್ಲಿ ನನಗೆ ಗಡ್ಡಪ್ಪನ ಪಾತ್ರ ತುಂಬಾನೆ ವಿಶಿಷ್ಟವಾಗಿ ಕಾಣುತ್ತದೆ.

ಇಲ್ಲಿ ಆರ್ಟ್ ಅಥವಾ ಕಮರ್ಷಿಯಲ್ ಸಿನೆಮಾವೆಂದು ವರ್ಗಿಕರಿಸುವ ಅವಶ್ಯಕತೆವಿಲ್ಲವೆಂದು ನನಗೆ ಅನ್ನಿಸುತ್ತದೆ. ತಿಥಿ ಒಂದು ಒಳ್ಳೆಯ ಸಿನೆಮಾ. ಕನ್ನಡದಲ್ಲಿ ಏನು ಇಲ್ಲ, ಕನ್ನಡ ಸಿನೆಮಾಗಳೆಲ್ಲಾ ಬರೇ ಬೋರಿಂಗ್ ಎಂದು ಬೊಬ್ಬೆ ಹೊಡೆಯುವ ಜನರು ಒಂದು ಬಾರಿಯಾದರು ತಿಥಿಗೆ ಹೋಗಿ ಬರಬೇಕು.

ಅಂತರಾಷ್ಟೀಯ ಪ್ರಶಸ್ತಿ ಬಂದಿದೆ ಎಂಬ ಕಾರಣಕ್ಕೆ ತಿಥಿ ನೋಡುವುದಕ್ಕಿಂತ, ನಮ್ಮ ಕನ್ನಡ ಸಿನೆಮಾ, ವಿಭಿನ್ನ ರೀತಿಯ ಮತ್ತು ನೈಜ ಮನರಂಜನಾ ಪರಿಪೂರ್ಣ ಸಿನೆಮಾ ಎಂದು ನೋಡಿದರೆ  ಮಜ ಜಾಸ್ತಿ. ಇಷ್ಟೆಲ್ಲಾ ಇರುವುದಕ್ಕೆ ಅಲ್ಲವೋ ಅಷ್ಟೆಲ್ಲಾ ಪ್ರಶಸ್ತಿಗಳ ಸರಮಾಲೆ?

ಈರೆಗೌಡ್ರು, ರಾಮ್ ರೆಡ್ಡಿ ಮತ್ತು ಚಿತ್ರತಂಡಕ್ಕೆ ಶುಭವಾಗಲಿ. ಮುಂದೆ ಈ ತಂಡದಿಂದ ಕನ್ನಡಕ್ಕೆ ಇನ್ನೂ ಹೆಚ್ಚು ಒಳ್ಳೆ ಸಿನೆಮಾಗಳು ಸಿಗುವಂತಾಗಲಿ.

"ಇದುವರೆಗೂ ನಾನು ಹೇಳಿದ್ದು ಒಂದು ಕಥೆಯೋ ಅಥವಾ ನೆನ್ನೆ ಕಂಡ ಕನಸೋ ನನಗಂತು ಗೊತ್ತಿಲ್ಲ".
(ತಿಥಿ ನೋಡಿದವರಿಗೆ ಈ ಮಾತಿನ ಅರ್ಥ ತಿಳಿಯುತ್ತದೆ).

No comments:

Post a Comment